Sankashti Chaturthi Vrat Katha Kannada - Summary
ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವವಾದ ಹಬ್ಬಗಳಲ್ಲಿ ಗಣೇಶ ಚತುರ್ಥಿಯು ಒಂದಾಗಿದೆ. ಈ ದಿನ ಗಣೇಶನನ್ನು ಪೂಜಿಸಿ ಆರಾಧಿಸಿ ವ್ರತೋಪಾಸನೆಗಳನ್ನು ಮಾಡಲಾಗುತ್ತದೆ. ಗಣೇಶ ಚತುರ್ಥಿಯ ವ್ರತ ಕಥೆಯನ್ನು ಕೇಳುವುದರಿಂದ ಸಕಲ ಕಷ್ಟಗಳು ದೂರವಾಗುತ್ತವೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಸಂಕಷ್ಟಿ ಚತುರ್ಥಿ ಶ್ರೀ ಗಣೇಶನಿಗೆ ಮೀಸಲಾಗಿರುವ ಒಂದು ಪವಿತ್ರವಾದ ದಿನವಾಗಿದೆ. ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಕೃಷ್ಣಪಕ್ಷ ಅಥವ ಹುಣ್ಣಿಮೆಯ ನಂತರ ಬರುವ ನಾಲ್ಕನೇ ದಿನ ಇದನ್ನು ಆಚರಿಸುತ್ತಾರೆ. ಅನೇಕ ಮಹಿಳೆಯರು ತಮ್ಮ ಕುಟುಂಬಗಳ ಕಲ್ಯಾಣಕ್ಕಾಗಿ ಸಂಕಷ್ಟಿ ಚತುರ್ಥಿಯ ದಿನದಂದು ಉಪವಾಸ ವ್ರತವನ್ನು ಆಚರಿಸುತ್ತಾರೆ. ಸಂಕಷ್ಟಿ ಅಂದರೆ ನಮ್ಮ ತೊಂದರೆಗಳಿಂದ ಮುಕ್ತಿಯಾಗುವುದು ಎಂದರ್ಥ. ಶ್ರೀ ಗಣೇಶ ಸಂಕಷ್ಟಿಯ ದಿನ ಎಲ್ಲಾ ತೊಂದರೆ, ಅಡೆತಡೆ ಮತ್ತು ಸಮಸ್ಯೆಗಳನ್ನು ನಿವಾರಿಸುವನೆಂಬ ನಂಬಿಕೆಯಿಂದ ಈ ವ್ರತವನ್ನು ಆಚರಿಸುತ್ತಾರೆ. ಅಂದು ಜನರು ದಿನಪೂರ್ತಿ ಉಪವಾಸವಿದ್ದು ರಾತ್ರಿ ಚಂದ್ರನನ್ನು ನೋಡಿದ ಮೇಲೆಯೇ ಉಪವಾಸವನ್ನು ಕೊನೆಗೊಳಿಸುತ್ತಾರೆ.
ಸಂಕಷ್ಟ ಚತುರ್ಥಿ ವ್ರತ ಕಥೆ – Sankashti Chaturthi Vrat Katha Kannada
ದಂತಕಥೆಯ ಪ್ರಕಾರ, ಒಂದು ಕಾಲದಲ್ಲಿ ಒಬ್ಬ ಲೇವಾದೇವಿಗಾರನು ತನ್ನ ಹೆಂಡತಿಯೊಂದಿಗೆ ನಗರದಲ್ಲಿ ವಾಸಿಸುತ್ತಿದ್ದನು. ಅವರಿಗೆ ಮಕ್ಕಳಿಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು. ಒಂದು ದಿನ ಲೇವಾದೇವಿಗಾರನ ಹೆಂಡತಿಗೆ ನೆರೆ ಮನೆಯ ಮಹಿಳೆ ಸಂಕಷ್ಟ ಚತುರ್ಥಿಯನ್ನು ಪೂಜಿಸುವಂತೆ ತಿಳಿಸುತ್ತಾಳೆ. ಗಣೇಶನ ಕಥೆ ಕೇಳಿದ ಆಕೆ ಮನೆಗೆ ಬಂದು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜೆ ಮಾಡಿ ಮುಂದಿನ ಚತುರ್ಥಿಯಂದು ಉಪವಾಸ ಮಾಡುತ್ತಾಳೆ. ಗಣೇಶನ ಆಶೀರ್ವಾದದಿಂದ ಲೇವಾದೇವಿ ದಂಪತಿಗೆ ಗಂಡು ಮಗುವಾಯಿತು. ಲೇವಾದೇವಿಗಾರನ ಮಗ ಬೆಳೆದನು.
ಆಗ ಉಪವಾಸ ವ್ರತ ಮಾಡಿ ಗಣೇಶನಿಗೆ ಪ್ರಸಾದ ನೀಡಬೇಕು ಎಂದು ನಿರ್ಧರಿಸಿದಳು. ಆದರೆ, ಮಗ ಮದುವೆ ವಯಸ್ಸಿಗೆ ಬಂದಿದ್ದಾನೆ. ಮದುವೆ ಆದ ಬಳಿಕ ಈ ವ್ರತ ಮಾಡೋಣ ಎಂದು ದಂಪತಿ ಸುಮ್ಮನಾದರೂ. ಇಷ್ಟು ವರ್ಷಗಳ ಕಾಲ ಒಂದಲ್ಲ ಒಂದು ನೆಪ ಹೇಳಿ ಪೊಜೆಯನ್ನು ಮುಂದೂಡುತ್ತಿದ್ದ ಲೇವಾದೇವಿಗಾರ ದಂಪತಿ ವಿರುದ್ಧ ಗಣೇಶ ಕೋಪಗೊಳ್ಳುತ್ತಾನೆ. ಈ ವೇಳೆ ಮದುವೆಗೆ ಇನ್ನೇನು ದಿನ ಬಾಕಿ ಇದೆ ಎಂದಾಗ ಗಣೇಶ ಲೇವಾದೇವಿಗಾರನ ಮಗನನ್ನು ಅರಳಿ ಮರದಲ್ಲಿ ಬಂಧಿಯಾಗಿ ಇಡುತ್ತಾನೆ.
ಮಗ ಕಾಣದಾದಾಗ ಇಬ್ಬರು ಹುಡುಕುತ್ತಾರೆ. ಆದರೆ, ಆತನ ಸುಳಿವು ಮಾತ್ರ ಸಿಗುವುದಿಲ್ಲ. ಈ ವೇಳೆ ಮಗನ ಧ್ವನಿ ಅರಳಿಮರದಿಂದ ಬರುತ್ತಿರುವುದು ಕೇಳುತ್ತದೆ. ಆಗ ಮಗ ಯಾವ ಉದ್ದೇಶಕ್ಕಾಗಿ ಅರಳಿ ಮರದಲ್ಲಿ ಬಂಧಿಯಾಗಿದ್ದಾನೆ ಎಂಬುದು ತಿಳಿಯುತ್ತದೆ. ತಪ್ಪಿನ ಅರಿವಾದ ಲೇವಾದೇವಿಗಾರ ದಂಪತಿಗಳು ಸಂಕಷ್ಟ ಚತುರ್ಥಿಯ ದಿನ ವಿಧಿವತ್ತಾಗಿ ಪೂಜೆ ಆಚರಿಸಿ ಕಥೆ ಕೇಳಿ ಗಣೇಶನಿಗೆ ಪ್ರಸಾದ ಅರ್ಪಿಸುತ್ತಾರೆ. ಇದರಿಂದ ಸಂತಸ ಗೊಂಡ ಗಣೇಶ ಮಗನನ್ನು ಬಿಟ್ಟು ಕಳಿಸುತ್ತಾನೆ ಎಂಬ ಕಥೆ ರೂಡಿಯಲ್ಲಿದೆ.
ಶ್ರೀ ಗಣೇಶ ಸಂಕಷ್ಟಿಯ ದಿನದ ಮಹತ್ವ
ಶ್ರೀ ಗಣೇಶನ ಕಥೆಯಂತೂ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ದೇವಿ ಪಾರ್ವತಿಯು ತನ್ನ ದೇಹದಮೇಲಿನ ಕೊಳಕಿನಿಂದ ಗಣೇಶನನ್ನು ಸೃಷ್ಟಿಮಾಡಿದಳು. ನಂತರ ಅವನನ್ನು ತನ್ನ ಮಗನೆಂದು ಕರೆದಳು. ಒಂದು ಮಹತ್ವಪೂರ್ಣದಿವಸ ದೇವಿ ಪಾರ್ವತಿಯು ಸ್ನಾನಕ್ಕೆ ಹೊರಡುವ ಮುನ್ನ ಗಣೇಶನಿಗೆ ಸ್ನಾನದ ಕೋಣೆಯ ಹೊರಗೆ ಕಾವಲು ಕಾಯಲು ಹೇಳಿದಳು. ಸ್ವಲ್ಪ ಸಮಯದ ನಂತರ ಶ್ರೀ ಶಿವನು ತನ್ನ ಗಣಗಳಪರಿವಾರ ಸಮೇತ ಬಂದಾಗ ಶ್ರೀ ಗಣೇಶ ಅವನನ್ನು ಒಳಗಡೆ ಹೋಗುವುದನ್ನು ತಡೆದು ನಿರಾಕರಿಸಿದನು.
ಆದ್ದರಿಂದ ಅವನಿಗೆ ಕೋಪ ಬಂದು ತನ್ನ ಗಣಗಳಿಗೆ ಆ ಹುಡುಗನ ಮೇಲೆ ದಾಳಿ ಮಾಡಲು ಆಜ್ಞಾಪಿಸಿದನು. ಹೀಗೆ ಹೋರಾಟ ನಡೆಯುತ್ತಿದ್ದಾಗ ಶ್ರೀ ಗಣೇಶನ ತಲೆ ಕತ್ತರಿಸಿಹೋಯಿತು.
ದೇವಿ ಪಾರ್ವತಿಗೆ ಈ ಅಪಘಾತದ ವಿಷಯ ತಿಳಿದ ಮೇಲೆ ದುಃಖದಿಂದ ಸಮಾಧಾನಗೊಳಿಸಲಾಗದ ಪರಿಸ್ಥಿತಿಯ ಮಟ್ಟವನ್ನು ತಲುಪಿದಳು. ಅವಳು ಆದಿ ಶಕ್ತಿಯ ಉಗ್ರರೂಪವನ್ನು ಧರಿಸಿಕೊಂಡು ಇಡೀ ಪ್ರಪಂಚವನ್ನೇ ನಾಶಪಡಿಸಲು ಸಿದ್ಧವಾದಳು. ಶ್ರೀ ಶಿವನು ತನ್ನ ಹೆಂಡತಿಯನ್ನು ಮೆಚ್ಚಿಸುವುದಕ್ಕೋಸ್ಕರ ಆ ಹುಡುಗನ ತಲೆಯನ್ನು ಪುನಃಸ್ಥಾಪಿಸುತ್ತೇನೆಂದು ಭರವಸೆಕೊಟ್ಟನು. ಹೀಗಾಗಿ ಆ ಹುಡುಗನಿಗೆ ಒಂದು ಆನೆಯತಲೆಯನ್ನಿಟ್ಟು ಗಣೇಶನೆಂದು ಕರೆಯಲ್ಪಟ್ಟನು. ಹಾಗೆ ಮಾಡಿದ ನಂತರ ಶ್ರೀ ಶಿವನು ಶ್ರೀ ಗಣೇಶನಿಗೆ ಇನ್ನು ಮುಂದೆ ಬುದ್ಧಿವಂತಿಕೆ, ಜ್ಞಾನ ಮತ್ತು ಸಮೃದ್ಧಿಯ ದೇವರೆಂದು ಪೂಜಿಸಲ್ಪಡುವನೆಂದು ವರವನ್ನು ಕೊಟ್ಟು ಆಶೀರ್ವಾದಮಾಡಿದನು.
ಪೂಜಾ ವಿಧಾನ
ಬೆಳಗ್ಗೆ ಬೇಗ ಎದ್ದು ಗಣೇಶನಿಗೆ ಪೂಜಿಸಬೇಕು. ಇಡೀ ದಿನ ಉಪವಾಸವನ್ನು ಆಚರಿಸಿ ಏಕೆಂದರೆ ಹೀಗೆ ಮಾಡುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಯಾವುದೇ ಆಹಾರ ಧಾನ್ಯವನ್ನು ಸೇವಿಸಬಾರದು. ಸಂಜೆ ಗಣಪತಿಯನ್ನು ಗರಿಕೆ, ಹೂವುಗಳು, ಧೂಪದ್ರವ್ಯಗಳನ್ನು ಅರ್ಪಿಸಿ, ಮಂಗಳಾರತಿ ಮಾಡಬೇಕು. ಚಂದ್ರೋದಯದ ನಂತರ ಉಪವಾಸವನ್ನು ಮುರಿಯಬಹುದು.